Wednesday, 28 December 2022

ಮಾನಸಿಕ ಅಸ್ವಸ್ಥನಿಂದ ಶಾಲಾ ಶಿಕ್ಷಕನ ಮೇಲೆ ತೀವ್ರ ಹಲ್ಲೆ



ಕೋಲಾರ:- ಮಾನಸಿಕ ಅಸ್ವಸ್ಥನೋರ್ವ ಶಾಲಾ ಶಿಕ್ಷಕನ ಮೇಲೆ ಹಲ್ಲೆ ಮಾಡಿರೋ ಘಟನೆ ಶ್ರೀನಿವಾಸಪುರ ತಾಲೂಕಿನ ಕೂರಿಗೇಪಲ್ಲಿ ಗ್ರಾಮದಲ್ಲಿ ನಡೆದಿದೆ. ವೆಂಕಟಶಿವ ಹಲ್ಲೆಗೆ ಒಳಗಾದ ಶಿಕ್ಷಕ.

ವೆಂಕಟಶಿವ ಎಂಬುವವರು ತರಗತಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ವೇಳೆ ಏಕಾಏಕಿ ಮಾನಸಿಕ ಅಸ್ವಸ್ಥ ಮಂಜುನಾಥ್ ಎಂಬಾತ ಬಂದು ಹಲ್ಲೆ ಮಾಡಲು ಮುಂದಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡ ಶಿಕ್ಷಕನಿಗೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ರಾಯಲ್ಪಾಡು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಮಾನಸಿಕ ಅಸ್ವಸ್ಥ ಮಂಜುನಾಥ್​​ನನ್ನು ಪೊಲೀಸರು ಬಂಧಿಸಿದ್ದಾರೆ.




ಕಾಂಗ್ರೆಸ್ ಬಾಗಿಲು ಮುಕ್ತವಾಗಿದೆ, ನಮ್ಮಿಂದ ದೂರವಾದವರಿಗೂ ಸ್ವಾಗತವಿದೆ: ಡಿ.ಕೆ.ಶಿವಕುಮಾರ್

ಬೆಳಗಾವಿ: ಡಿಸೆಂಬರ್‌ 28: ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಭರಪೂರ ಸಿದ್ದತೆ ನಡೆಸಿವೆ. ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಈ ಬಾರಿ ತನ್ನ ಅದೃಷ್ಟ ಪರೀಕ್ಷಿಸಲಿದೆ.

ಪ್ರಧಾನಿ ಮೋದಿ ವರ್ಚಸ್ಸು ಹಾಗೂ ಹಿಂದುತ್ವದ ಮೇಲೆ ಬಿಜೆಪಿ ಅವಲಂಬಿತವಾಗಿದೆ. ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಮೈಸೂರು ಭಾಗದಲ್ಲಿ ಮತ್ತೆ ಪ್ರಾಬಲ್ಯ ಹೊಂದಲು ಜೆಡಿಎಸ್‌ ಕಸರತ್ತು ನಡೆಸಿದೆ.

ಇದೇ ವೇಳೆ, ಬೇರೆ ಪಕ್ಷದಲ್ಲಿ ಇರುವವರು ಕಾಂಗ್ರೆಸ್‌ಗೆ ಬರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಈ ವಿಚಾರದ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಕರ್ನಾಟಕದಲ್ಲಿ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರುವುದಾಗಿ ಹೇಳುತ್ತಿದ್ದಾರೆ. ಬೇರೆ ಪಕ್ಷಗಳಲ್ಲಿರುವ ಹಳಬರು ಸೇರಿದಂತೆ ಹೊಸಬರು ಕಾಂಗ್ರೆಸ್‌ಗೆ ಬರಲು ಸಿದ್ಧತೆ ನಡೆಸಿದ್ದಾರೆ. ಎಲ್ಲರಿಗೂ ಕಾಂಗ್ರೆಸ್‌ನ ಬಾಗಿಲು ಮುಕ್ತವಾಗಿದೆ. ನಮ್ಮಿಂದ ದೂರವಾದವರು, ನಮ್ಮ ಜೊತೆ ವೈಮನಸ್ಸು ಹೊಂದಿ ಬೇರೆ ಪಕ್ಷಗಳಿಗೆ ಹೋದವರಿಗೆ ನಾವು ಸ್ವಾಗತಿಸುತ್ತೇವೆ' ಎಂದು ಹೇಳಿದ್ದಾರೆ.

'ಬೇರೆ ಪಕ್ಷಗಳ ಮುಖಂಡರು ನನಗೆ ಕರೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸೇರುವುದಾಗಿ ಹೇಳುತ್ತಿದ್ದಾರೆ. ಬೆಳಗಾವಿಯಲ್ಲಿನ ವಿಧಾನಸಭೆ ಅಧಿವೇಶನ ಮುಗಿದ ನಂತರ ಎಲ್ಲರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು' ಎಂದು ಡಿಕೆಶಿ ತಿಳಿಸಿದ್ದಾರೆ.

ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ಶಾಸಕರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, 'ಈ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ. ಮುಂದಿನ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಭಾರಿಸಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ಸರ್ಕಾರದ ಪಾಲುದಾರರಾಗುವ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು' ಎಂದು ಹೇಳಿದ್ದಾರೆ.

ಮುಂದಿನ ಚುನಾವಣೆಗೆ ಈಗಲೇ ಸಿದ್ದತೆ ನಡೆಸಿಕೊಂಡಿರುವ ಕಾಂಗ್ರೆಸ್‌ ಜನವರಿ 1 ರೊಳಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಸಿದ್ದಪಡಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಚುನಾವಣೆಗೆ ಪ್ರಚಾರ ಮಾಡಲು ಡಿಸೆಂಬರ್‌ 11 ರಿಂದ ಬಸ್‌ ಯಾತ್ರೆ ಕೈಗೊಳ್ಳುವುದಾಗಿ ಡಿಕೆಶಿ ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತಾವು ಸೇರಿ ಬಸ್‌ ಯಾತ್ರೆ ಆರಂಭಸುವುದಾಗಿ ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ವೈಮನಸ್ಸು ಇದೆ ಎಂದು ಬಿಜೆಪಿ ಹೇಳುತ್ತಿದೆ. ಇದನ್ನು ಅಲ್ಲಗಳೆಯುತ್ತಲೇ ಬಂದಿರುವ ಡಿಕೆಸಿ, ಬಿಜೆಪಿ ವಿರುದ್ಧ ಗುಡುಗುತ್ತಲೇ ಬಂದಿದ್ದಾರೆ.

ಮಹಾರಾಷ್ಟ್ರದ ಬೇಡಿಕೆ ಬಗ್ಗೆ ಮಾತನಾಡಿದ ಅವರು, ಕರ್ನಾಟಕದ ಒಂದು ಇಂಚು ಭೂಮಿಯನ್ನೂ ನಾವು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ್ದಾರೆ.

Related Posts:

0 Please Share a Your Opinion.: